ಮೂಡುಬಿದಿರೆ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹಿನ್ನೆಲೆ ಪ್ರಕರಣದ ಕುರಿತು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಸಂತ್ರಸ್ತೆಯಲ್ಲಿ ಒಬ್ಬಾಕೆಯ ಮೇಲೆ ಎರಡು ಪ್ರಕರಣ ಇದೆ. ಅವರ ದೂರು ಆಧರಿಸಿ ಸಂದೇಶ್ ಮೇಲೆಯೂ ದೂರು ದಾಖಲು ಮಾಡಲಾಗಿದೆ. ಪ್ರಕರಣ ಹೈಕೋರ್ಟ್ನಲ್ಲಿ ಸ್ಥಗಿತವಾಗಿದ್ದು ನ್ಯಾಯಾಲಯದಲ್ಲಿ ತೀರ್ಮಾನವಾಗಬೇಕಿದೆ ಎಂದರು.
ಮಹಿಳೆಯರು ದೂರು ನೀಡಲು ನಿರಾಕರಿಸಿದ್ದಾರೆ
ಇನ್ನೋರ್ವ ಮಹಿಳೆಯ ವಿರುದ್ಧವೂ ಲೈಂಗಿಕ ಕಿರುಕುಳವಾದ ಬಗ್ಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ, ಇಪ್ಪತ್ತೈದು ಲಕ್ಷ ರೂಪಾಯಿ ಲಂಚ ಕೇಳಿದ ಬಗ್ಗೆಯೂ ಸಾಕ್ಷ್ಯಗಳಿಲ್ಲ, ವಿಡಿಯೋ ಮತ್ತು ಆಡಿಯೋದಲ್ಲಿರುವ ಮಹಿಳೆಯರು ದೂರು ನೀಡಲು ನಿರಾಕರಿಸಿದ್ದಾರೆ ಎಂದು ಪ್ರಕರಣದ ಬಗ್ಗೆ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದರು.
ಮೂಡುಬಿದಿರೆ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಸಾಲು ಸಾಲು ಲೈಂಗಿಕ ಕಿರುಕುಳ ಹಾಗೂ ಸುಲಿಗೆಯ ಗಂಭೀರ ಆರೋಪಗಳು ಕೇಳಿಬಂದಿವೆ. ಮಾಧ್ಯಮದ ಮುಂದೆ ಸಂತ್ರಸ್ತೆ ಕೂಡ ಕೆಲ ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಮೂಡಬಿದ್ರೆ ಇನ್ಸ್ಪೆಕ್ಟರ್ ವಿರುದ್ಧ ದೂರು ದಾಖಲಾಗಿದೆ. ಸಂತ್ರಸ್ತ ಮಹಿಳೆ ಇನ್ಸ್ಪೆಕ್ಟರ್ನ ಕಿರುಕುಳದ ಬಗ್ಗೆ ಇಂಚಿಂಚು ಮಾಹಿತಿಯನ್ನು ಬಿಚ್ಚಿಟ್ಟಿದ್ದು, ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಗೃಹ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೂ ದೂರು ನೀಡಿದ್ದಾರೆ.
ಇನ್ಸ್ಪೆಕ್ಟರ್ ವಿರುದ್ಧ ಧ್ವನಿ ಎತ್ತಿದ ಮತ್ತೊಬ್ಬ ಮಹಿಳೆ ಅವಿತಾ ಮಿನೆಜಸ್. ಇವರ ಪತಿಯ ವಿರುದ್ಧ ಈಗಾಗಲೇ ಹಲವು ಪ್ರಕರಣಗಳಿವೆ. ಆ ಪ್ರಕರಣಗಳಲ್ಲಿ ಒಂದರಲ್ಲಿ, ಅವರು ಮತ್ತು ಅವರ ಪತಿ ವ್ಯಕ್ತಿಯೊಬ್ಬರ ಚಿಕಿತ್ಸೆಗಾಗಿ ಸಂಗ್ರಹಿಸಿದ ಹಣವನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರ, ಅವರ ಮತ್ತು ಅವರ ಪತಿಯ ವಿರುದ್ಧ ಪ್ರಕರಣ ದಾಖಲಿಸಲಾಯಿತು.
ಯಾವುದಾದರೂ ಪ್ರಕರಣದಲ್ಲಿ ಗಂಡನನ್ನು ಬಂಧಿಸಿದರೆ ಅದನ್ನೇ ನೆಪ ಮಾಡಿಕೊಂಡು ಆತನ ಪತ್ನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಇನ್ಸ್ಪೆಕ್ಟರ್ ಸಂದೇಶ್ ಮೇಲಿದೆ. ಹಲವು ಮಹಿಳೆಯರಿಗೆ ಇದೇ ರೀತಿ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪ ಮಾಡಿದ್ದಾರೆ. ನಿನ್ನ ಗಂಡನಿಗೆ ತೊಂದರೆ ಆಗಬಾರದು ಅಂದರೆ 'ನನ್ನ ಜೊತೆ ಮಲಗು' ಎಂದು ಮಹಿಳೆಯರನ್ನು ಪೀಡಿಸುತ್ತಿದ್ದ ಈತ, ರಾತ್ರಿ ವೇಳೆ ಮಹಿಳೆಯರ ಮನೆಯ ಗೇಟ್ ಹಾರಿ ಒಳನುಗ್ಗುತ್ತಿದ್ದ ಎನ್ನಲಾಗುತ್ತಿದೆ. ಹಲವು ಮಹಿಳೆಯರು ಮೌನಕ್ಕೆ ಶರಣಾಗಿದ್ದಾರೆ ಎಂದು ಸಂತ್ರಸ್ತೆಯರು ಆರೋಪಿಸಿದ್ದಾರೆ.
ಮಹಿಳಾ ಆಯೋಗದಲ್ಲಿ ಸುಮೋಟೋ ಕೇಸ್!
ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ರಾಜ್ಯ ಮಹಿಳಾ ಆಯೋಗದಲ್ಲಿ ಸುಮೋಟೋ ಕೇಸ್ ದಾಖಲಾಗಿದೆ. ಸುಮೋಟೋ ಕೇಸ್ ದಾಖಲಿಸಿ ಮಂಗಳೂರು ಕಮಿಷನರ್ಗೆ ಪತ್ರ ಬರೆದಿರುವ ರಾಜ್ಯ ಮಹಿಳಾ ಆಯೋಗ ಎರಡು ವಾರದಲ್ಲಿ ವರದಿ ನೀಡುವಂತೆ ಸೂಚನೆ ನೀಡಿದೆ.
ಮೂಡಬಿದ್ರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಕಿರುಕುಳ ಆರೋಪದ ಬಗ್ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಮಾತನಾಡಿದ್ದಾರೆ. ಸಂತ್ರಸ್ತೆ ಈ ಹಿಂದೆ ಜೂನ್ನಲ್ಲಿ ದೂರು ಕೊಟ್ಟಿದ್ದರು. ಅದರ ಪ್ರಕಾರ ಎಸ್ಪಿ ಅವರಿಗೆ ಪತ್ರ ಬರೆಯಲಾಗಿತ್ತು, ಅವರು ಆರೋಪ ಮಾಡದಂತೆ ಸಾಕ್ಷ್ಯ ಇಲ್ಲ ಅಂದರು, ಈಗ ಮತ್ತಷ್ಟು ಸಂತ್ರಸ್ತೆಯರು ಇದ್ದಾರೆ ಅಂತ ಗೊತ್ತಾಗುತ್ತಿದೆ. ಈ ಬಗ್ಗೆಯೂ ಎಸ್ಪಿ ಹಾಗೂ ಕಮಿಷನರ್ಗೆ ವರದಿ ಕೇಳಲಾಗಿದೆ ಜೊತೆಗೆ ಇನ್ಸ್ಪೆಕ್ಟರ್ ವಿರುದ್ಧ ಏನು ಕ್ರಮ ಆಗಿದೆ ಅಂತಲೂ ಕೇಳಿದ್ದೇನೆ, ನೋಡೋಣ ಏನು ವರದಿಯನ್ನು ಕೊಡುತ್ತಾರೆ ಅಂತೆ ಎಂದು ನ್ಯೂಸ್ 18ಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಹೇಳಿದ್ದಾರೆ.








